ಭಕ್ತಿ ಎಂಬುದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಅದಕ್ಕೆ ನಮ್ಮ ದೇಶದ ತುಂಬೆಲ್ಲ ತುಂಬಿಕೊಂಡಿರೋ ಧಾರ್ಮಿಕ ವಾತಾವರಣ, ಅದಕ್ಕೆ ಪೂರಕವಾದ ಪುರಾಣ ಕಾವ್ಯಗಳೆಲ್ಲವೂ ಪ್ರಧಾನ ಕಾರಣವಾಗಿದ್ದಿರಬಹುದು. ಅಂಥಾದ್ದೊಂದು ಭಕ್ತಿಯ ಭಾಗವಾಗಿಯೇ ಇಲ್ಲಿನ ಉದ್ದಗಲಕ್ಕೂ ದೇವಸ್ಥಾನಗಳಿವೆ. ಲೆಕ್ಕವಿಲ್ಲದಷ್ಟು ಪುಣ್ಯ ಕ್ಷೇತ್ರಗಳಿದ್ದಾವೆ. ಅಂಥಾ ಸ್ಥಳಗಳಿಗೆಲ್ಲ ಭೇಟಿ ಕೊಟ್ಟು ಭಕ್ತಿ ಭಾವಗಳಲ್ಲಿ ಮಿಂದೇಳಬೇಕೆಂಬುದು ಅನೇಕರ ಕನಸು. ಆದರೆ ಅಂಥಾ ಸ್ಥಳಗಳಿಗೆ ಹೋಗುವವರಲ್ಲಿ ಬಹುತೇಕರಿಗೆ ಆಯಾ ಕ್ಷೇತ್ರಗಳ ವೈಶಿಷ್ಟ್ಯಗಳೇ ಗೊತ್ತಿರೋದಿಲ್ಲ. ಹುಡುಕುತ್ತಾ ಹೋದರೆ ಆ ವಿವರಗಳೇ ಚೇತೋಹಾರಿಯಾಗಿವೆ.
ಈಗ ಅದರಲ್ಲೊಂದು ವಿಶೇಷವಾದ ಕ್ಷೇತ್ರದ ಸ್ಥಳ ಮಹಿಮೆಗಳ ಬಗ್ಗೆ ಹೇಳಹೊರಟಿದ್ದೇವೆ. ಅದು ಕೇರಳ ರಾಜ್ಯದಲ್ಲಿರೋ ಅಬಲಪುಳ ಶ್ರೀ ಕೃಷ್ಣ ದೇವಸ್ಥಾನ. ಕೇರಳವೆಂದರೇನೇ ದೇವರನಾಡೆಂದು ಹೆಸರುವಾಸಿಯಾಗಿರೋ ನೆಲ. ಅಲ್ಲಿಯೂ ಕೂಡಾ ಕಾರಣೀಕ ಹೊಂದಿರೋ ಅನೇಕ ಸ್ಥಳಗಳಿದ್ದಾವೆ. ಅದರಲ್ಲಿ ಅಬಲಪುಳ ಕೃಷ್ಣ ದೇವಳವೂ ಒಂದು. ಇದು ಪ್ರೇಕ್ಷಣೀಯ ಸ್ಥಾನ. ಅಲ್ಲಿಗೆ ಪ್ರತೀ ವರ್ಷ ಸಾಕಷ್ಟು ಭಕ್ತಾಧಿಗಳು ತೆರಳುತ್ತಾರೆ. ಆದರೆ ಅದರ ಪೌರಾಣಿಕ, ಐತಿಹಾಸಿಕ ಹಿನ್ನೆಲೆ ನಿಜಕ್ಕೂ ಸ್ವಾರಸ್ಯಕರವಾಗಿದೆ.
ದೇಶಾದ್ಯಂತ ಹಲವಾರು ಕೃಷ್ಣ ದೇವಳಗಳಿದ್ದಾವೆ. ಆದರೆ ಇಲ್ಲಿ ಮಾತ್ರವೇ ಕೃಷ್ಣ ಪರಮಾತ್ಮ ಮಹಾಭಾರತದ ಪಾರ್ಥಸಾರಥಿಯ ಸ್ವರೂಪದಲ್ಲಿ ದರ್ಶನ ಕೊಡುತ್ತಾನೆ. ಒಂದು ಕೈಯಲ್ಲಿ ಚಾವಟಿಗೆ ಮತ್ತು ಇನ್ನೊಂದು ಕೈನಲ್ಲಿ ಶಂಖ ಹಿಡಿದಿರೋ ರೂಪದ ಕೃಷ್ಣ ಭಕ್ತಾದಿಗಳಲ್ಲಿ ಹೊಸಾ ಅನುಭೂತಿಯನ್ನೇ ಸೃಜಿಸುತ್ತಾನೆ. ಇಂಥಾ ದೇವಳಕ್ಕೆ ಒಂದಷ್ಟು ಐತಿಹ್ಯಗಳೂ ಇರಲೇಬೇಕು. ೧೫-೧೭ನೇ ಶತಮಾನದಲ್ಲಿ ಈ ದೇವಾಲಯ ನಿರ್ಮಾಣವಾಗಿತ್ತೆನ್ನಲಾಗಿದೆ. ಚಂಬಕಶೇರಿ ಪ್ರಾಂತ್ಯದ ರಾಜನಾಗಿದ್ದು ಪುರದಂ ತಿರುನಾಳ್ ಈ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದನೆನ್ನಲಾಗಿದೆ.
ಈ ದೇವಾಲಯ ನಿರ್ಮಾಣದ ಹಿಂದೆ ಮತ್ತೊಂದು ಸ್ವಾರಸ್ಯವೂ ಇದೆ. ಈ ದೇವಸ್ಥಾನವಿರೋ ಪಕ್ಕದಲ್ಲಿನ ಹಿನ್ನೀರಿನಲ್ಲಿ ಅದೊಮ್ಮೆ ರಾಜ ತನ್ನ ರಾಜಗುರುವಾದ ವಿಲ್ವಮಂಗಲಂ ಸ್ವಾಮಿಯಾರ್ ಜೊತೆ ವಿಹಾರ ನಡೆಸುತ್ತಿದ್ದನಂತೆ. ಆಗ ಗುರುಗಳಿಗೆ ಸನಿಹದಿಂದಲೇ ಕೃಷ್ಣನ ಕೊಳಲಿನ ನಾದ ಕೇಳಿದಂತಾಗಿತ್ತು. ಅದರ ಜಾಡು ಹಿಡಿದು ಹೊರಟಾಗ ಅದು ಅಲ್ಲೇ ಸಮೀಪವಿದ್ದ ಅರಳೀಮರದಿಂದ ಹೊಮ್ಮುತ್ತಿರೋದು ಖಾತರಿಯಾಗಿತ್ತು. ಬಳಿಕ ಗುರುಗಳು ದಿವ್ಯದೃಷ್ಟಿಯಿಂದ ಅದು ಕೃಷ್ಣನ ಕಾರಣೀಕದ ಸ್ಥಳ ಎಂಬುದನ್ನು ಪತ್ತೆಹಚ್ಚಿದ್ದರಂತೆ. ಇದನ್ನು ಅರಿತುಕೊಂಡ ರಾಜ ಈ ದೇವಾಲಯ ನಿರ್ಮಾಣ ಮಾಡಿದನೆಂಬ ಪ್ರತೀತಿ ಇದೆ.