ಹೂವಿನಂಥಾ ಹಾಡಿನ ಮಹಾ ಮೋಡಿ!
ಕಾಡುವ ಹಾಡಿಗೆ ಮನಸೋಲದವರಿಲ್ಲ. ಸಂಗೀತ ಪ್ರೇಮಿಗಳಂತೂ ಕೇಳುತ್ತಾ ಮತ್ಯಾವುದೋ ಭಾವ ಲೋಕದಲ್ಲಿ ಕಳೆದು ಹೋಗಿಸುವಂಥಾ ಹಾಡಿಗಾಗಿ ಸದಾ ಧ್ಯಾನಿಸುತ್ತಿರುತ್ತಾರೆ. ಅಂಥಾ ಹಾಡೊಂದು ಅಚಾನಕ್ಕಾಗಿ ಕಿವಿ ಸೋಕಿದಾಗ ಆಗುವ ಖುಷಿಯಿದೆಯಲ್ಲಾ? ಅದು ಜಗದ ಎಲ್ಲ ಸೌಭಾಗ್ಯ, ಸುಖಗಳನ್ನೂ ಮೀರಿದ ಮಾಯೆ. ಅದನ್ನು ಅನುಭವಿಸಬಹುದೇ ಹೊರತು ಮಾತಲ್ಲಿ ಹಿಡಿದಿಡೋದಾಗಲಿ, ಅಕ್ಷರಗಳಲ್ಲಿ ಬಂಧಿಸೋದಾಗಲಿ ಕಡುಗಷ್ಟದ ಕೆಲಸ. ಇತ್ತಿತ್ತಲಾಗಿ ಅಂಥಾದ್ದೊಂದು ಸ್ವರ್ಗ ಸುಖವನ್ನು ಕೇಳಿದ ಪ್ರತಿಯೊಬ್ಬರೆದೆಯೂ ಮೊಗೆದು ಸುರಿದ ಹಾಡು ಬನಾರಸ್ನ ಮಾಯಗಂಗೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಈ ಹಾಡನ್ನು ಕೇಳಿ ಥ್ರಿಲ್ ಆಗದವರೇ ಇಲ್ಲ. ಅಷ್ಟು ಚೆಂದಗೆ ಮೂಡಿ ಬಂದಿದ್ದ ಮಾಯಗಂಗೆಯನ್ನು ಎಲ್ಲರೂ ಮನಸೊಳಗೆ ಹರಿಯಲು ಬಿಟ್ಟಿದ್ದಾಳೆ, ಈ ಕಾರಣದಿಂದಲೇ ಈಗ ಮಾಯಗಂಗೆ ಕರುನಾಡಿನ ಗಡಿದಾಟಿ, ನೆರಯ ರಾಜ್ಯಗಳಲ್ಲಿಯೂ ಮೈದುಂಬಿ ಹರಿಯುತ್ತಿದ್ದಾಳೆ.
ಹಾಗೊಂದು ಮಹಾಮೋಡಿ ಘಟಿಸದೇ ಹೋಗಿದ್ದರೆ ಖಂಡಿತವಾಗಿಯೂ ಇಷ್ಟು ಕಡಿಮೆ ಅವಧಿಯಲ್ಲಿ ಈ ಹಾಡಿಗೆ ಐದು ಮಿಲಿಯನ್ನಿಗೂ ಅಧಿಕ ವೀಕ್ಷಣೆಗಳು ಸಿಕ್ಕಲು ಸಾಧ್ಯವಾಗುತ್ತಿರಲಿಲ್ಲ. ನಿಮಗೆಲ್ಲ ಗೊತ್ತಿರುವಂತೆ ಜಯತೀರ್ಥ ನಿರ್ದೇಶನದ ಬನಾರಸ್ ಚಿತ್ರ ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲದಲ್ಲಿಯೇ ಬಿಡುಗಡೆಯಾಗಿದೆ. ಆರಂಭಿಕವಾಗಿ ಮಾಯಗಂಗೆ ಹಾಡು ಕನ್ನಡದಲ್ಲಿ ಬಿಡುಗಡೆಯಾಗಿತ್ತು. ಆ ನಂತರ ಹಲವಾರು ಗಣ್ಯರ ಕಡೆಯಿಂದ ತೆಲುಗು, ತಮಿಳು, ಹಿಂದಿ ಮುಂತಾದ ಭಾಷೆಗಳಲ್ಲಿಯೂ ಮಾಯಗಂಗೆ ಬಿಡುಗಡೆಯಾಗಿತ್ತು. ಕನ್ನಡದಲ್ಲಿ ಎಂಥ ಪ್ರತಿಕ್ರಿಯೆ ಸಿಕ್ಕಿತ್ತೋ, ಅಂಥಾದ್ದೇ ರೋಮಾಂಚಕ ಪ್ರತಿಕ್ರಿಯೆಗಳು ಎಲ್ಲ ಭಾಷೆಗಳಲ್ಲಿಯೂ ಮಾಯಗಂಗೆಗೆ ಸಿಕ್ಕಿದೆ.
ನಿರ್ದೇಶಕ ಜಯತೀರ್ಥ ವಿಶಿಷ್ಟವಾದ ಅಭಿರುಚಿ ಹೊಂದಿರುವ ಅಪರೂಪದ ನಿರ್ದೇಶಕ. ಒಲವೇ ಮಂದಾಚ ಚಿತ್ರದಿಂದ ಬನಾರಸ್ ವರೆಗೂ ಅವರ ಹಾದಿ ಭಿನ್ನಾತಿ ಭಿನ್ನ. ವಿಶೇಷವೆಂದರೆ, ಪ್ರತೀ ಸಿನಿಮಾಗಳಲ್ಲಿಯೂ ಅವರು ಹಾಡುಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾರೆ. ಈ ಕಾರಣದಿಂದಲೇ ಅವರೊಂದು ಸಿನಿಮಾ ನಿರ್ದೇಶನಕ್ಕಿಳಿದರೆಂದರೆ ಸಂಗೀತಾಸಕ್ತರು ಹಾಡುಗಳ ಆಗಮನಕ್ಕಾಗಿ ಕಾದು ಕೂತಿರುತ್ತಾರೆ. ಬನಾರಸ್ ಘೋಷಣೆಯಾದಂದಿನಿಂದಲೂ ಅಂಥಾದ್ದೊಂದು ಕಾಯುವಿಕೆ ಚಾಲ್ತಿಗೆ ಬಂದಿತ್ತು. ಹಾಗೆ ಕಾದವರೆಲ್ಲರ ಮನಸುಗಳೂ ಮಾಯಗಂಗೆಯ ಮೋಡಿಗೆ ಮರುಳಾಗಿವೆ. ಅದರ ಫಲವಾಗಿಯೇ ಈ ಸಾಂಗು ಇದೀಗ ಎಲ್ಲ ಕಡೆಗಳಲ್ಲಿಯೂ ಟ್ರೆಂಡಿಂಗ್ನಲ್ಲಿದೆ. ಎಲ್ಲ ಬಾಷೆಗಳಲ್ಲಿಯೂ ಇದೀಗ ಮಾಯಗಂಗೆ ಮೈದುಂಬಿ ಹರಿಯುತ್ತಾ ಕೇಳಿದ ಪ್ರತೀ ಮನಸುಗಳಲ್ಲಿಯೂ ಪ್ರಫುಲ್ಲ ಭಾವ ಮೂಡಿಸುತ್ತಾ ಸಾಗುತ್ತಿದೆ.
ಒಂದು ಹಾಡಿನ ಮೂಲಕ ಒಂದಿಡೀ ಚಿತ್ರ ಪ್ರೇಕ್ಷಕರ ಆಸಕ್ತಿ ಕೇಂದ್ರದ ಮುನ್ನೆಲೆಗೆ ಬಂದು ನಿಲ್ಲುವುದು ಅಪರೂಪದ ಬೆಳವಣಿಗೆ. ಕೆಲವೇ ಕೆಲ ಸಿನಿಮಾಗಳಿಂದ ಮಾತ್ರವೇ ಆ ಥರದ್ದೊಂದು ಮ್ಯಾಜಿಕ್ಕು ಸಾಧ್ಯವಾಗುತ್ತದೆ. ಆ ಸಾಲಿನಲ್ಲಿ ಬನಾರಸ್ ಕೂಡಾ ನಿಸ್ಸಂದೇಹವಾಗಿ ಸೇರಿಕೊಳ್ಳುತ್ತದೆ. ಇದಕ್ಕೆ ಪ್ರಧಾನ ಕಾರಣವಾಗಿರೋದು ಅಜನೀಶ್ ಲೋಕನಾಥ್ರ ಮಾಂತ್ರಿಕ ಸಂಗೀತ ಮತ್ತು ವಿ. ನಾಗೇಂದ್ರ ಪ್ರಸಾದ್ ಅವರ ಸಮ್ಮೋಹಕ ಸಾಹಿತ್ಯ. ಅಕ್ಷರಕ್ಷರವೂ ಒಳಗಿಳಿಯುವಂಥಾ ಸಾಹಿತ್ಯ ಆರಂಭಿಕವಾಗಿಯೇ ಮನಸೆಳೆದಿತ್ತು. ಈ ಮೂಲಕ ನಾಗೇಂದ್ರ ಪ್ರಸಾದ್ರ ಹಿಟ್ ಲಿಸ್ಟಿಗೂ ಈ ಹಾಡು ಬಹು ಬೇಗನೆ ಸೇರಿಕೊಂಡಿತ್ತು. ಮಾಯಗಂಗೆಯ ಮೂಲಕವೇ ಬನಾರಸ್ನ ದೃಷ್ಯ ವೈಭವದ ಸುಳಿವೂ ಸಿಕ್ಕಿದೆ. ಜೊತೆಗೆ ನವನಾಯಕ ಝೈದ್ ಖಾನ್ ಬಗ್ಗೆ ಭರಪೂರ ಮೆಚ್ಚುಗೆಗಳೂ ದಕ್ಕಿವೆ. ಚಿತ್ರ ತಂಡ ಖುಷಿಗೊಳ್ಳಲು ಮತ್ತೇನು ಬೇಕು?