ಕ್ಷೇತ್ರ ಯಾವುದೇ ಆಗಿರಲಿ; ಎಲ್ಲ ವ್ಯವಹಾರಗಳನ್ನು ಮೀರಿದ ತಪಸ್ಸೊಂದಿರದೇ ಹೋದರೆ ಸೃಜನಾತ್ಮಕವಾಗಿ ಏನೂ ಹುಟ್ಟಲು ಸಾಧ್ಯವಿಲ್ಲ. ಹಾಗಿದ್ದ ಮೇಲೆ ಸೃಜನಶೀಲತೆಯೇ ಆತ್ಮವಾಗಿರುವ ಸಿನಿಮಾ ರಂಗಕ್ಕೆ ಅಂಥಾದ್ದೊಂದು ಅಸೀಮ ಧ್ಯಾನದ ಹಾಜರಿ ಇದ್ದೇ ಇರಬೇಕು. ಹೆಚ್ಚಿನ ಮಂದಿ ನಿರ್ದೇಶನ, ನಟನೆ ಮುಂತಾದವುಗಳನ್ನು ಮಾತ್ರವೇ ಸೃಜನಶೀಲತೆಯ ಪರಿಧಿಗೆ ತರುತ್ತಾರೆ. ಆದರೆ ಓರ್ವ ನಿರ್ಮಾಪಕನೊಳಗೂ ಅಂಥಾ ಗುಣ ಇಲ್ಲದೇ ಹೋದರೆ ಸಿನಿಮಾ ಒಂದು ಎಲ್ಲ ಕೋನಗಳಿಂದಲೂ ಪರಿಪೂರ್ಣವಾಗಿ ಮೂಡಿ ಬರಲು ಸಾಧ್ಯವಾಗುವುದಿಲ್ಲ. ಇಲ್ಲಿಯವರೆಗೂ ನಿರ್ಮಾಣ ವಿಭಾಗದಲ್ಲಿ ಇಂಥಾ ಮನಸ್ಥಿತಿಒ ಹೊಂದಿರುವವರೇ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಇದೀಗ ಅಂಥಾದ್ದೇ ಮನಸ್ಥಿತಿ, ಸಿನಿಮಾ ವ್ಯಾಮೋಹ ಹೊಂದಿರುವ ಮನೋಹರ್ ಸುವರ್ಣ ವಿಲೋಕ್ ಶೆಟ್ಟಿ ನಿರ್ದೇಶನದ ಚೇಸ್ ಚಿತ್ರದ ಮೂಲಕ ಆಗಮಿಸಿದ್ದಾರೆ. ಈ ಮೂಲಕ ಕನ್ನಡ ಚಿತ್ರ ನಿರ್ಮಾಣ ವಲಯದಲ್ಲೊಂದು ‘ಸುವರ್ಣ’ ಅಧ್ಯಾಯ ಶುರುವಾಗುವ ಮುನ್ಸೂಚನೆ ನಿಖರವಾಗಿಯೇ ಸಿಗಲಾರಂಭಿಸಿದೆ!
ಯಾವುದೇ ಸಿನಿಮಾ ರೂಪುಗೊಳ್ಳೋದರ ಹಿಂದೆ ಒಂದಷ್ಟು ಘಟ್ಟಗಳಿರುತ್ತವೆ. ಒಂದು ಕಥೆ ಹುಟ್ಟಿ, ಅದು ಸಿನಿಮಾ ರೂಪ ಪಡೆದು ಗೆದ್ದೇ ಗೆಲ್ಲುತ್ತದೆಂಬಂಥಾ ನಂಬಿಕೆ ಹುಟ್ಟಿದ ನಂತರವೂ ನಿರ್ಮಾಪಕನೊಬ್ಬ ಸಿಗದೇ ಹೋದರೆ ಕನಸಿನ ಪಕಳೆಗಳೆಲ್ಲ ಬಾಡಿ ಉದುರುತ್ತವೆ. ಹಾಗೆ ಕಮರಿದ ಕನಸುಗಳು ಗಾಂಧಿನಗರದ ಗಲ್ಲಿಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಈ ದಿಸೆಯಲ್ಲಿ ನೋಡ ಹೋದರೆ ಯಾವುದೇ ಚಿತ್ರಗಳ ವಿಚಾರದಲ್ಲಿಯೂ ನಿರ್ಮಾಪಕರೊಬ್ಬರು ಸಿಕ್ಕುವುದು ನಿರ್ಣಾಯಕ ಘಟ್ಟ. ಚೇಸ್ ವಿಚಾರದಲ್ಲಿ ಆ ಹಂತವನ್ನು ದಾಟಿಕೊಂಡು ಬಂದಿದ್ದರ ಹಿಂದೊಂದು ಅಚ್ಚರಿದಾಯಕ ಕಥಾನಕವಿದೆ.
ಮನೋಹರ್ ಸುವರ್ಣ ಮೂಲತಃ ಮಂಗಳೂರು ಸೀಮೆಯವರು. ಕಡುಗಷ್ಟದಿಂದ ಮೇಲೆದ್ದು ಬಂದು ಅವರು ಉದ್ಯಮಿಯಾಗಿ ನೆಲೆ ಕಂಡುಕೊಂಡಿದ್ದೇ ಒಂದು ಸೋಜಿಗ. ಮಂಗಳೂರಿನಲ್ಲಿಯೇ ಪೆಟರೋ ಕೆಮಿಕಲ್ಸ್ ಬ್ಯುಸಿನೆಸ್ ಮಾಡುತ್ತಾ ಮುಂದುವೆರೆದು ಬಂದ ಸುವರ್ಣ ಭಿನ್ನ ಅಭಿರುಚಿ ಹೊಂದಿರುವವರು. ಆರಂಭ ಕಾಲದಿಂದಲೂ ಸಿನಿಮಾ ಗೀಳು ಅಂಟಿಸಿಕೊಂಡಿದ್ದ ಅವರೊಳಗೆ, ಸಿನಿಮಾ ರಂಗದಲ್ಲೇನಾದರೂ ಸಾಧಿಸಬೇಕೆಂಬಂಥ ಸುಪ್ತ ಬಯಕೆಯಿತ್ತು. ಆದರೆ ಆ ಬಗ್ಗೆ ತೀರಾ ಹತ್ತಿರದವರ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದು ಕಡಿಮೆಯೇ. ಆದರೆ, ಇಂಥಾ ಆಕಾಂಕ್ಷೆಗಳು ತೀವ್ರವಾಗಿದ್ದರೆ ಕೆಲವೊಮ್ಮೆ ಅವಕಾಶವೆಂಬುದು ತಾನೇ ತಾನಾಗಿ ಕೂಡಿ ಬರುತ್ತದೆ. ಮನೋಹರ್ ಸುವರ್ಣರ ವಿಚಾರದಲ್ಲಿಯೂ ಅದು ಅಕ್ಷರಶಃ ನಿಜವಾಗಿದೆ. ಯಾಕೆಂದರೆ, ಲೋಕಾಭಿರಾಮವಾಗಿ ಕೇಳಿದ ಕಥೆಯನ್ನು ಅವರು ಬಹುವಾಗಿ ಇಷ್ಟಪಟ್ಟು ಆ ಮೂಲಕವೇ ನಿರ್ಮಾಪಕರಾಗಿದ್ದೊಂದು ಅಚ್ಚರಿ!
ಈ ಚಿತ್ರದ ನಿರ್ದೇಶಕ ವಿಲೋಕ್ ಶೆಟ್ಟಿ ಕೂಡಾ ಮಂಗಳೂರು ಸೀಮೆಯವರೇ. ಮನೋಹರ್ ಸುವರ್ಣ ವಿಲೋಕ್ ಅವರ ಫ್ಯಾಮಿಲಿ ಫ್ರೆಂಡ್. ಅದಾಗಲೇ ಚೇಸ್ ಚಿತ್ರದ ಕಥೆ ಸಿದ್ಧಪಡಿಸಿಕೊಂಡಿದ್ದ ವಿಲೋಕ್ ಶೆಟ್ಟಿ ಮನೋಹರ್ ಸುವರ್ಣರನ್ನು ಭೇಟಿಯಾದಾಗ ನಿರುದ್ಧಿಷ್ಯವಾಗಿ ಕಥೆ ಹೇಳಿದ್ದರು. ಒಂದು ಅದ್ಭುತ ಸಸ್ಪೆನ್ಸ್ ಥ್ರಿಲ್ಲರ್ ಕಥಾನಕ ಕಣ್ಮುಂದೆ ಹಾದು ಹೋಗುತ್ತಿದೆ ಎಂಬಂತೆ ತನ್ಮಯರಾಗಿ ಕೇಳಿಸಿಕೊಂಡಿದ್ದ ಸುವರ್ಣರಿಗೆ ಒಂದೇ ಸಲಕ್ಕೆ ಒಂದಿಡೀ ಕಥೆ ಇಷ್ಟವಾಗಿ ಹೋಗಿತ್ತಂತೆ. ಹೇಳಿಕೇಳಿ ಆ ಹೊತ್ತಿಗೆಲ್ಲ ನಿರ್ಮಾಪಕನಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವ ಆಕಾಂಕ್ಷೆ ಅವರೊಳಗೆ ಗರಿಗೆದರಿಕೊಂಡಿತ್ತು. ಆದುದರಿಂದಲೇ ಚೇಸ್ ಸಿನಿಮಾ ನಿರ್ಮಾಣ ಮಾಡುವ ಬಗ್ಗೆ ಉತ್ಸುಕತೆ ತೋರಿದ್ದರು. ಹಾಗೆ ನಿರ್ಮಾಪಕರಾಗಿ ಮನೋಹರ್ ಸುವರ್ಣರ ಯಾನ ಅಚಾನಕ್ಕಾಗಿ ಅಲ್ಲಿಂದಲೇ ಶುರುವಾಗಿ ಹೋಗಿತ್ತು.
ಆ ನಂತರದಲ್ಲಿ ಚೇಸ್ ಅನ್ನು ಸುವರ್ಣ ಅವರು ಪೊರೆಯುತ್ತಾ ಬಂದಿರುವ ಪರಿಯ ಬಗ್ಗೆ ನಿರ್ದೇಶಕ ವಿಲೋಕ್ ಶೆಟ್ಟಿ ಸೇರಿದಂತೆ ಇಡೀ ಚಿತ್ರತಂಡದಲ್ಲೊಂದು ಮೆಚ್ಚುಗೆ ಇದೆ. ಒಂದಷ್ಟು ಮಂದಿ ಕೇವಲ ವ್ಯಾವಹಾರಿಕ ದೃಷ್ಟಿಯಿಂದಷ್ಟೇ ಸಿನಿಮಾ ನಿರ್ಮಾಣಕ್ಕಿಳಿಯುತ್ತಾರೆ. ಅವರ ಪಾಲಿಗದು ಕಾಸು ಹಾಕಿ ಫಸಲು ತೆಗೆಯುವ ಒಂದು ಉದ್ಯಮವಷ್ಟೇ. ಅಂಥಾ ಮೆಂಟಾಲಿಟಿ ಹೊಂದಿರುವ ಮಂದಿ ಕಾಸು ಹೂಡಿಕೆ ಮಾಡೋದಷ್ಟೇ ತಮ್ಮ ಕೆಸ ಎಂಬಂತಿರುತ್ತಾರೆ. ಆದರೆ ಮತ್ತೆ ಕೆಲವರು ಹಣಕಾಸಿನ ವ್ಯವಹಾರದಾಚೆಗೆ ತಮ್ಮ ಸಿನಿಮಾವನ್ನು ಪೊರೆಯುತ್ತಾರೆ. ಯಾವುದಕ್ಕೂ ಕಡಿಮೆಯಾಗದಂತೆ ಸಿನಿಮಾ ಏನು ಬಯಸುತ್ತದೋ ಅದನ್ನು ಪೂರೈಸುತ್ತಾ ಚೆಂದಗಾಣಿಸುತ್ತಾರೆ. ಮನೋಹರ್ ಸುವರ್ಣ ಎರಡನೇ ಸಾಲಿಗೆ ಸೇರುವವರು. ಯಾಕೆಂದರೆ ಅವರ ಪಾಲಿಗೆ ಚೇಸ್ ಎಂಬುದು ಮಹಾ ಕನಸಾಗಿತ್ತು!
ನಿರ್ದೇಶಕ ವಿಲೋಕ್ ಶೆಟ್ಟಿ ಕಥೆಯನ್ನು ರೂಪಿಸಿದ್ದ ರೀತಿ ಮತ್ತು ಸಿನಿಮಾ ಬಗ್ಗೆ ಅವರಿಗಿದ್ದ ಗಂಭೀರ ಮನಸ್ಥಿತಿಗಳನ್ನು ಮೆಚ್ಚಿಕೊಂಡೇ ಸುವರ್ಣ ಈ ಚಿತ್ರವನ್ನು ಆರಂಭಿಸಿದ್ದರಂತೆ. ಹಾಗೆ ಚೇಸ್ ಶುರುವಾದದ್ದು ಸಣ್ಣ ಬಜೆಟ್ಟೊಂದರ ಚೌಕಟ್ಟಿನಲ್ಲಿ. ಆದರೆ ದಿನಗಳೆದಂತೆಲ್ಲ ಅದರ ಬಜೆಟ್ಟಿನ ವ್ಯಾಪ್ತಿ ವಿಸ್ತಾರವಾಗುತ್ತಾ ಸಾಗಿತ್ತು. ಹೇಳಿ ಕೇಳಿ ಮನೋಹರ್ ಸುವರ್ಣ ಓರ್ವ ಉದ್ಯಮಿ. ದಿನವಹೀ ಬಿಡುವಿರದಷ್ಟೆ ಕೆಲಸ ಕಾರ್ಯಗಳಿರುತ್ತವೆ. ಅದರ ನಡುವೆಯೂ ಬಿಡುವು ಮಾಡಿಕೊಳ್ಳುತ್ತಿದ್ದ ಸುವರ್ಣ, ಪ್ರತೀ ನಿತ್ಯ ಚಿತ್ರೀಕರಣದ ಸ್ಥಳದಲ್ಲಿ ಹಾಜರಿರುತ್ತಿದ್ದರಂತೆ. ಈ ಕಾರಣದಿಂದಲೇ ಸಿನಿಮಾವೊಂದರ ಹಿಂದಿರುವ ಶ್ರಮದ ಅರಿವಾಗಿ, ಏನು ಮಾಡಿದರೆ ಅದು ಅಂದಗಾಣುತ್ತದೆಂಬ ಸ್ಪಷ್ಟ ಅಂದಾಜು ಸಿಗುವಂತಾಗಿತ್ತು. ಈ ಕಾರಣದಿಂದಲೇ ಯಾವ ಕಾಂಪ್ರೋಮೈಸ್ ಕೂಡಾ ಇಲ್ಲದೆ ಚೇಸ್ ಅನ್ನು ರೂಪಿಸುವ ನಿರ್ಧಾರಕ್ಕೆ ಸುವರ್ಣ ಬಂದಿದ್ದರು.
ಅದರ ಫಲವಾಗಿಯೇ ಚೇಸ್ ಎಲ್ಲ ಕೋನಗಳಿಂದಲೂ ಚೆಂದಗೆ ಮೂಡಿ ಬರುವಂತಾಗಿದೆ. ಅದರ ದೆಸೆಯಿಂದಲೇ ಯುಎಫ್ಒದಂಥಾ ದೊಡ್ಡ ಸಂಸ್ಥೆ ಅದರ ವಿತರಣಾ ಹಕ್ಕುಗಳನ್ನು ಖರೀದಿಸುವಂತಾಗಿದೆ. ಹೀಗೆ ಅತೀವ ಸಿನಿಮಾ ಪ್ರೀತಿಯಿಂದ ಈ ಚಿತ್ರ ನಿರ್ಮಾಣ ಮಾಡಿದ್ದ ಮನೋಹರ್ ಸುವರ್ಣರಿಗೆ ಸವಾಲೆಂಬುದು ಕೊರೋನಾ ವೈರಸ್ಸಿನ ಸ್ವರೂಪದಲ್ಲಿ ಬಂದೆರಗಿತ್ತು. ಸಿನಿಮಾ ತಯಾರಾಗಿದ್ದರೂ ಬಿಡುಗಡೆಗೆ ಸಿದ್ಧಗೊಳ್ಳಲಾರದ ಪರಿಸ್ಥಿತಿ ಬಂದೆರಗಿತ್ತು. ಅಂಥಾ ಕಾಲದಲ್ಲಿಯೂ ಅಂಜದೆ ಚಿತ್ರತಂಡವನ್ನು ಪೊರೆದ, ಯಾವುದಕ್ಕೂ ಕಡಿಮೆಯಾಗದಂತೆ, ಹಿನ್ನಡೆಯಾಗದಂತೆ ನೋಡಿಕೊಂಡ ಸುವರ್ಣರ ಸಿನಿಮಾ ಪ್ರೀತಿ ದೊಡ್ಡದು. ಇಷ್ಟೆಲ್ಲ ಆಗುಹೋಗುಗಳ ನಡುವೆ ಒಂದೊಳ್ಳೆ ಸಿನಿಮಾ ನಿರ್ಮಾಣ ಮಾಡಿರುವ ಖುಷಿ ಮನೋಹರ್ ಸುವರ್ಣರಲ್ಲಿದೆ. ಈಗ ಚೇಸ್ ಬಗ್ಗೆ ಮೂಡಿಕೊಂಡಿರುವ ಕ್ರೇಜ್ ನೋಡಿದರೆ ಅವರ ಶ್ರಮ ಸಾರ್ಥಕವಾಗುವ ಲಕ್ಷಣಗಳು ಸ್ಪಷ್ಟವಾಗಿಯೇ ಗೋಚರಿಸುತ್ತಿವೆ.