ಶೋಧ ನ್ಯೂಸ್ ಡೆಸ್ಕ್: ಇದೀಗ ದೇಶದ ತುಂಬೆಲ್ಲ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಪರವಾದ ಅಲೆ ಎದ್ದುಕೊಂಡಿದೆ. ಮಿಕ್ಕ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿ, ಧರ್ಮದಮಲಿನಲ್ಲಿ ಮಿಂದೇಳುತ್ತಿರುವಾಗ ಕೇಜ್ರಿವಾಲ್ ತಮ್ಮದೇ ಆದ ಅಭಿವೃದ್ಧಿ ಪಥವನ್ನು ಆಯ್ದುಕೊಂಡಿರೋದೇ ಅದಕ್ಕೆ ಕಾರಣ. ಹೀಗೆ ಎದ್ದಿರುವ ಅಲೆಯಲ್ಲಿ ತೂರಿಕೊಂಡು ಅಧಿಕಾರ ಹಿಡಿಯುವ ಆಸೆಯಿಂದಲೇ ಒಂದಷ್ಟು ಮಂದಿ ಆಮ್ ಆದ್ಮಿ ಪಕ್ಷ ಸೇರಿಕೊಂಡಿದ್ದೂ ಇದೆ. ಆ ಸಾಲಿನಲ್ಲಿ ಉತ್ತರಾಖಂಡದ ಎಎಪಿ ನಾಯಕರಾಗಿ ಗುರುತಿಸಿಕೊಂಡು, ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿಯೂ ಬಿಂಬಿತರಾಗಿದ್ದ ಅಜಯ್ ಕೊಥಿಯಾಲ್ ಕೂಡಾ ಸೇರಿಕೊಂಡಿದ್ದಾರೆ. ಯಾಕೆಂದರೆ, ಅವರೀಗ ಏಕಾಏಕಿ ಎಎಪಿಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿಕೊಂಡಿದ್ದಾರೆ.
ಅಜಯ್ ಕೊಥಿಯಾಲ್ ನಿವೃತ್ತ ಕರ್ನಲ್. ಕಳೆದ ವಿಧಾನಸಭಾ ಚುನಾವಣೆಯ ಹೊತ್ತಿಗೆಲ್ಲ ಅವರು ಉತ್ತರಾಖಂಡದ ತುಂಬ ಶೈನಪ್ ಆಗಿದ್ದರು. ಒಂದು ವೇಳೆ ಎಎಪಿ ಗೆದ್ದರೆ ಖಂಡಿತಾ ಕೊಥಿಯಾಲ್ ಸಿಎಂ ಆಗುತ್ತಾರೆಂಬಂತೆ ಸುದ್ದಿಗಳು ಹಬಬಿಕೊಂಡಿದ್ದವು. ಆದರೆ ಅದು ಹೇಗೋ ಅಲ್ಲಿ ಬಿಜೆಪಿ ಜಯಭೇರಿ ಭಾರಿಸಿತ್ತು. ಚುನಾವಣೆಗೂ ಮುನ್ನ ಮಹತ್ತರವಾದುದೇನನ್ನೋ ಮಾಡುವಂತೆ ಭ್ರಮೆ ಬಿತ್ತಿದ್ದ ಕೊಥಿಯಾಲ್ ಕೂಡಾ ಈ ವಿದ್ಯಮಾನದಿಂದ ಬದಲಾದಂತಿದ್ದರು. ಅದರ ಫಲವಾಗಿಯೇ ಅವರೀಗ ಬಿಜೆಪಿ ಸೇರಿಕೊಂಡಿದ್ದಾರೆ.
ಒಂದು ವೇಳೆ ಕೊಥಿಯಾಲ್ಗೆ ಅಧಿಕಾರಕ್ಕಿಂತಲೂ ಬದಲಾವಣೆಯೇ ಮುಖ್ಯವಾಗಿದ್ದರೆ ಆತ ಒಂದು ಸೋಲಿನಿಂದ ವಿಚಲಿತರಾಗುತ್ತಿರಲಿಲ್ಲ. ಪಕ್ಷವನ್ನು ಮತ್ತಷ್ಟು ಸದೃಢಗೊಳಿಸುವತ್ತ ಚಿತ್ತ ಹರಿಸುತ್ತಿದ್ದರು. ಆದರೆ ಪಕ್ಷವನ್ನು ತಳ ಮಟ್ಟದಿಂದ ನೆಲೆನಿಲ್ಲಿಸಿ ಅಧಿಕಾರ ಕೇಂದ್ರಕ್ಕೆ ಬರುವ ವ್ಯವಧಾನವಿಲ್ಲದ ಕೊಥಿಯಾಲ್ ಆಪ್ಗೆ ರಾಜೀನಾಮೆ ನೀಡಿದ್ದರು. ಅದಾಗಿ ಎರಡ್ಮೂರು ದಿನಗಳ ಕಾಲ ಅವರ ಮುಂದಿನ ನಡೆಯೇನೆಂಬುದು ನಿಗೂಢವಾಗಿತ್ತು. ಕಡೆಗೂ ಅವರು ಬಿಜೆಪಿ ಸೇರಿಕೊಳ್ಳುವ ಮೂಲಕ ಎಲ್ಲವೂ ಬಯಲಾಗಿವೆ!