ಶೋಧ ನ್ಯೂಸ್ ಡೆಸ್ಕ್: ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮಹಮದ್ರನ್ನು ಅವಹೇಳನ ಮಾಡಿದ ವಿಚಾರ, ಆಕೆಯ ತಲೆದಂಡವಾಗೋದರ ಜೊತೆಗೆ ಬಿಜೆಪಿಗೂ ಪೀಕಲಾಟ ತಂದಿಟ್ಟಿದೆ. ಇಡೀ ದೇಶದ ತುಂಬೆಲ್ಲ ಇದೀಗ ಹಿಂದೂ ಮುಸ್ಲಿಂ ಎಂಬಂಥಾ ವಾರ್ ನಡೆಯುತ್ತಿದೆ. ಅದಕ್ಕೆ ಕಿಚ್ಚು ಹಚ್ಚುತ್ತಾ ಬಂದ ಬಿಜೆಪಿ ಸರ್ಕಾರಕ್ಕೆ ವಕ್ತಾರೆಯ ಹೇಳಿಕೆಯೀಗ ತೀವ್ರವಾದ ಮುಜುಗರ ತಂದಿಟ್ಟಿದೆ. ಇಂಥಾದ್ದೊಂದು ಹೇಳಿಕೆ ನೀಡಿರುವ ನೂಪುರ್ ಶರ್ಮಾರನ್ನು ಬಿಜೆಪಿ ಮಂದಿ ಅಮಾನತುಗೊಳಿಸಿ ಸಂಕಷ್ಟದಿಂದ ಪಾರಾಗುವಂಥಾ ತಂತ್ರಗಾರಿಕೆ ಅನುಸರಿಸಿದ್ದಾರೆ. ಆದರೂ ಕೂಡಾ ಇಸ್ಲಾಮಿಕ್ ದೇಶಗಳು ಇದರ ವಿರುದ್ಧ ಕಠಿಣ ಕ್ರಮ ಅನುಸರಿಸುವ ಮೂಲಕ ಪ್ರತಿಭಟನೆ ನಡೆಸುತ್ತಿದೆ.
ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚೋದನ್ನೇ ಗುರಿಯಾಗಿಸಿಕೊಂಡಂತಿರುವ ಬಿಜೆಪಿ ಮಂದಿ ಈಗೊಂದಷ್ಟು ದಿನಗಳಿಂದ ಬರೀ ಅಂಥಾದ್ದೇ ಕೆಲಸ ಮಾಡುತ್ತಿದೆ. ಅದರ ಭಾಗವಾಗಿಯೇ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮಹಮದ್ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದರು. ಇದರ ಪರಿಣಾಮವಾಗಿ ಇದೀಗ ಮುಸ್ಲಿಂ ರಾಷ್ಟ್ರ ದುಬೈನ ಸೂಪರ್ ಮಾರ್ಕೆಟ್ಟುಗಳಲ್ಲಿ ಭಾರತೀಯ ಉತ್ಪನ್ನಗಳನ್ನು ಮಾರಾಟ ಮಾಡದಂತೆ ತಡೆ ಹಿಡಿಯಲಾಗಿದೆ. ಭಾರತೀಯ ಉತ್ಪನ್ನಗಳ ಮೇಲೆ ಹೊದಿಕೆ ಹೊದಿಸಿ ಮರೆಮಾಚಲಾಗುತ್ತಿದೆ. ಇನ್ನೂ ಕೆಲವೆಡೆಗಳಲ್ಲಿ ಸೂಪರ್ ಮಾರ್ಕೆಟ್ಟುಗಳಿಂದ ಭಾರತೀಯ ಉತ್ಪನ್ನಗಳನ್ನು ತೆವುಗೊಳಿಸಲಾಗುತ್ತಿದೆ.
ಯಾವಾಗ ಮುಸ್ಲಿಂ ರಾಷ್ಟ್ರಗಳಲ್ಲಿ ಈ ಪಾಟಿ ವಿರೋಧ ವ್ಯಕ್ತವಾಯ್ತೋ ಆಗ ಬೇರೆ ದಾರಿ ಕಾಣದೆ ಬಿಜೆಪಿ ವರಿಷ್ಠರು ನೂಪುರ್ ಶರ್ಮಾರನ್ನು ಅಮಾನತುಗೊಳಿಸಿದ್ದಾರೆ. ಈ ನೂಪುರ್ ಶಮಾ ಬ್ರಾಹ್ಮಣ ಸಮುದಾಯದಾಕೆ. ಆಕೆಯನ್ನು ಅಮಾನತುಗೊಳಿಸಿದ್ದರಿಂದಾಗಿ ಇತ್ತ ಆ ಸಮುದಾಯದ ಮಂದಿ ಮೋದಿ ವಿರುದ್ಧವೇ ಕಿಡಿಕಾರಲಾರಂಭಿಸಿದ್ದಾರೆ ಒಟ್ಟಾರೆಯಾಗಿ ಬಿಜೆಪಿ ತಾನೇ ಹಚ್ಚಿದ ಬೆಂಕಿಯಿಂದ ತನ್ನನ್ನೇ ಸುಟ್ಟುಕೊಳ್ಳುವಂಥಾ ಸಂದರ್ಭ ಬಂದೊದಗಿದೆ.ಇದರ ಜೊತೆ ಜೊತೆಗೇ ಮುಸ್ಲಿಂ ರಾಷ್ಟ್ರಗಳ ಪ್ರತಿರೋಧ ಕೂಡಾ ತೀವ್ರವಾಗುತ್ತಿದೆ.