ಈ ಗೆಲುವು ಅನ್ನೋದಿದೆಯಲ್ಲಾ? ಅದು ಯಾವ ವಿಶ್ಲೇಷಣೆಗಳ ನಿಲುಕಿಗೂ ಸಿಗದ ಮಾಯಾವಿ. ಕೆಲ ಮಂದಿ ಪ್ರತಿಭಾವಂತರಾಗಿದ್ದರೂ, ಅದಕ್ಕೆ ಬೇಕಾದ ಪರಿಶ್ರಮ, ಶ್ರದ್ಧೆಗಳೆಲ್ಲ ಇದ್ದರೂ ಗೆಲುವೆಂಬುದು ಕೈಗೆಟುಕದೆ ಕಾಡಿಸುತ್ತದೆ. ಆದರೆ ಇನ್ನೂ ಕೆಲ ಪುಣ್ಯಾತ್ಮರಿಗೆ ಎಲ್ಲೋ ಒಂದು ಕಡೆ ಕೂತು ಖಾಲಿ ಡಬ್ಬ ಬಡಿದರೂ ಸಲೀಸಾಗಿ ಗೆಲುವು ದಕ್ಕಿ ಬಿಡುತ್ತದೆ. ಈ ಮಾತಿಗೆ ತಾಜಾ ಉದಾಹರಣೆಯಂತಿರುವ ಪ್ರತಿಭೆ ಚಂದನ್ ಶೆಟ್ಟಿ. ಬಗಲಲ್ಲಿರೋ ಡಬ್ಬದ ಬಲದಿಂದಲೇ ಬಿಗ್ಬಾಸ್ ಶೋಗೂ ಹೋಗಿ ಬಂದ ಚಂದನ್ ಶೆಟ್ಟಿ ಆ ನಂತರ ಒಂದಷ್ಟು ಎಫರ್ಟ್ ಹಾಕುತ್ತಿದ್ದಾನೆಂಬುದೇ ಸಂತಸದ ಸಂಗತಿ. ಹೀಗಿರುವ ಚಂದನ್ ಇದೀಗ ಮ್ಯೂಸಿಕ್ಕಿನ ನಡುವೆಯೇ ನಟನೆಯತ್ತ ಕೈಚಾಚಿದ್ದಾನೆ. ಸದ್ಯ ಆತನಿಗೀಗ ನಟನಾಗೋ ನಶೆಯೇರಿಕೊಂಡಂತಿದೆ!
ರೆಟ್ರೋ ಶೈಲಿಯ ಸುಕ್ಕಾ ಸಾಂಗ್ ಮೂಲಕವೂ ಟಾಕ್ ಕ್ರಿಯೇಟ್ ಮಾಡಿರುವ ಚಂದನ್ ಶೆಟ್ಟಿಯ ಮೂಡೆಲ್ಲವೂ ಇದೀಗ ನಟನೆಯ ಸುತ್ತಲೇ ಕೇಂದ್ರೀಕರಿಸಿಕೊಂಡಿದೆ. ಅಚ್ಚರಿದಾಯಕವಾಗಿ ಆತ ಎಲ್ರ ಕಾಲೆಳಿಯುತ್ತೆ ಕಾಲ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ಸುದ್ದಿ ಹೊರಬಿದ್ದಿತ್ತು. ಅದರ ಒಂದಷ್ಟು ಝಲಕ್ಕು ಕಂಡ ಮಂದಿ ಮೂಗು ಮುರಿದದ್ದೂ ಇದೆ. ಯಾಕೆಂದರೆ ಆ ಝಲಕ್ಕುಗಳಲ್ಲಿ ಓರ್ವ ನಟನಾಗಿ ಚಂದನ್ ಪಳಗಿದಂತೆ ಕಾಣಿಸಿರಲಿಲ್ಲ. ಆದರೆ ಆತನ ಪ್ರಕಾರ ತಾನೋರ್ವ ಪರಿಪೂರ್ಣ ನಟ ಮತ್ತು ನಟನೆಯೇ ತನ್ನ ಬದುಕಿಗೆ ಹೊಸಾ ದಿಕ್ಕು ತೋರುತ್ತದೆಂಬ ಅಚಲವಾದ ನಂಬಿಕೆ ಇದ್ದಂತಿದೆ.
ಎಲ್ರ ಕಾಲೆಳಿಯುತ್ತೆ ಕಾಲ ಚಿತ್ರಕ್ಕಾಗಿ ಚಂದನ್ ಭಾರೀ ಕಷ್ಟಪಟ್ಟಿದ್ದಾನಂತೆ. ತುಕವನ್ನು ಏಕಾಏಕಿ ತೊಂಬತ್ತು ಕೇಜಿಗೆ ಏರಿಸಿಕೊಂಡು ಮತ್ತೆ ಇಳಿಸಿಕೊಳ್ಳಬೇಕಾದ ಸವಾಲಿಗೂ ಎದೆಕೊಟ್ಟಿದ್ದನಂತೆ. ಆದರೆ ನಟನೆ ಅನ್ನೋದು ಬರೀ ತೂಕದ ಏರಿಳಿತದ ಆಟವಲ್ಲ; ಅದೊಂದು ಧ್ಯಾನದಂಥಾ ಸ್ಥಿತಿ ಎಂಬುದು ಚಂದನ್ಗೆ ಅರ್ಥವಾಗಿದೆಯೋ ಇಲ್ಲವೋ ಭಗವಂತನೇ ಬಲ್ಲ. ಇದೆಲ್ಲದರಾಚೆಗೆ ಶೆಟ್ಟರು ಓರ್ವ ನಟನಾಗಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಬಿಗ್ಬಾಸ್ ಶೋ ನಂತರದಲ್ಲಿ ನಾಯಕನಾಗಬೇಕೆಂಬುದರತ್ತು ಆತ ಫೋಕಸ್ಸು ಮಾಡಿದ್ದರಂತೆ. ಅದಕ್ಕೆ ತಕ್ಕುದಾದ ಅವಕಾಶಗಳು ಹುಡುಕಿ ಬರುತ್ತಿವೆ ಎಂಬ ಖುಷಿ ಚಂದನ್ನದ್ದು.
ಅತ್ತ ಮಡದಿ ನಿವೇದಿತಾಳನ್ನು ಮಾಡೆಲಿಂಗ್ ನಟನೆ ಅಂತೆಲ್ಲ ಅವಳ ಆಸಕ್ತಿಗನುಗುಣವಾಗಿ ಬಿಟ್ಟು, ಇತ್ತ ತನ್ನ ಆಸಕ್ತಿಯ ಕೇಂದ್ರವಾಗಿರೋ ನಟನಾಗಿ ಮಿಂಚುವ ಕನಸು ಚಂದನ್ ಶೆಟ್ಟಿಯಲ್ಲಿದೆ. ಆದರೆ ನಟನೆ ಒಂದಷ್ಟು ಪರಿಶ್ರಮ, ಸಿದ್ಧತೆಗಳನ್ನು ಬೇಡುತ್ತದೆ. ಅದು ಖಾಲಿ ಡಬ್ಬ ಬಡಿದು, ಕರ್ಕಶವಾಗಿ ಕೂಗಿಕೊಂಡಷ್ಟು ಸಲೀಸಾದುದಲ್ಲ. ಈ ಸೂಕ್ಷ್ಮದ ಅರಿವಾಗಿ ಒಂದಷ್ಟು ಸಿದ್ಧತೆ ಮಾಡಿಕೊಂಡರೆ ನಟನಾಗಿ ಚಂದನ್ ಒಂದಷ್ಟು ಸುದ್ದಿ ಮಾಡಬಹುದೇನೋ. ಆದರೆ, ರ್ಯಾಪೋ ಮತ್ತೊಂದೋ ಮಾಡಿಕೊಂಡು ಹಾಯಾಗಿದ್ದ ಚಂದನ್ಗೆ ನಟನಾಗೋ ರಿಸ್ಕು ಬೇಡವಾಗಿತ್ತು ಅಂತ ಆತನನ್ನು ಮೆಚ್ಚಿಕೊಳ್ಳುವವರೇ ಅಂದುಕೊಳ್ಳುತ್ತಿರಬಹುದು. ಚಂದನ್ನ ನಟನೆ ನೋಡುಗರಿಗೊಂದು ರಿಸ್ಕು ಅನ್ನಿಸಿಕೊಳ್ಳದಂತಿರಲಿ ಎಂಬುದು ಹಾರೈಕೆ!