ಹ್ಯಾಂಡ್ಸಮ್ ಹೀರೋ ಝೈದ್ ಖಾನ್ ಬನಾರಸ್ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗುಲು ಇನ್ನು ಕೆಲವೇ ಕೆಲ ದಿನಗಳು ಮಾತ್ರ ಬಾಕಿ ಉಳಿದುಕೊಂಡಿವೆ. ಅದಾಗಲೇ ಈ ಸಿನಿಮಾದ ಪ್ರಭೆ ದೇಶದ ಉದ್ದಗಲಕ್ಕೂ ಸಮ್ಮೋಹಕವಾಗಿ ಹಬ್ಬಿಕೊಳ್ಳುತ್ತಿದೆ. ಅತ್ತ ಝೈದ್ ಖಾನ್ ಅತ್ಯುತ್ಸಾಹದಿಂದ ಬೇರೆ ಬೇರೆ ರಾಜ್ಯಗಳನ್ನು ಸುತ್ತುತ್ತಾ, ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಮಾಧ್ಯಮ ಸಂದರ್ಶನವೂ ಸೇರಿದಂತೆ ಕೆಲವಾರು ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಅದೇ ಹೊತ್ತಿನಲ್ಲಿ ಮತ್ತೊಂದು ದಿಕ್ಕಿನಿಂದ ಬನಾರಸ್ ಬಗೆಗಿನ ಬೆರಗಾಗುವಂಥಾ ಒಂದಷ್ಟು ವಿಚಾರಗಳು ಒಂದರ ಹಿಂದೊಂದರಂತೆ ಜಾಹೀರಾಗುತ್ತಿದ್ದಾವೆ. ಕರ್ನಾಟಕ ಮತ್ತು ಕೇರಳಗಳಲ್ಲಿ ಬನಾರಸ್ ವಿತರಣಾ ಹಕ್ಕು ಡಿ ಬೀಟ್ಸ್ ಹಾಗೂ ಮಲಕುಪ್ಪಡಮ್ ಪಾಲಾದ ಸುದ್ದಿಯ ಬೆನ್ನಲ್ಲಿಯೇ ಹಿಂದಿಯ ವಿತರಣಾ ಹಕ್ಕು ಯಾರ ಪಾಲಾಗಲಿದೆ ಅಂತೊಂದು ಪ್ರಶ್ನೆ ಮೂಡಿಕೊಂಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ!
ಬನಾರಸ್ ಹೇಳಿಕೇಳಿ ಪ್ಯಾನಿಂಡಿಯಾ ಚಿತ್ರ. ಆದ್ದರಿಂದಲೇ ಉತ್ತರ ಭಾರತದ ತುಂಬೆಲ್ಲ ಸಮರ್ಥವಾಗಿ ಬಿಡುಗಡೆಯಾಗುವಂತೆ ನೋಡಿಕೊಳ್ಳಲೇ ಬೇಕಾದ ಅನಿವಾರ್ಯತೆ ಇದೆ. ಯಾಕೆಂದರೆ, ಒಟ್ಟಾರೆ ಗೆಲುವಿನಲ್ಲಿ ಉತ್ತರದ ಪಾಲು ದೊಡ್ಡದಿದೆ. ಈ ಸಂಬಂಧವಾಗಿ ಬನಾರಸ್ ಚಿತ್ರತಂಡ ಅತ್ಯಂತ ಎಚ್ಚರದ ಹೆಜ್ಜೆಯನ್ನಿಟ್ಟಿತ್ತು. ಕಡೆಗೂ ಉತ್ತರ ಭಾರತದ ವಿತರಣಾ ಹಕ್ಕು ಪನೋರಮಾ ಸಂಸ್ಥೆಯ ಪಾಲಾಗಿದೆ. ಈ ಮೂಲಕ ಬನಾರಸ್ಗೆ ಮತ್ತಷ್ಟು ಖದರ್ ಸಿಕ್ಕಂತಾಗಿದೆ. ಯಾಕೆಂದರೆ, ಪನೋರಮಾ ಎಂಬುದು ಉತ್ತರ ಭಾರತದಾದ್ಯಂತ ತನ್ನದೇ ಆದ ಛಾಪು ಮೂಡಿಸಿರುವ ಪ್ರತಿಷ್ಠಿತ ಸಂಸ್ಥೆ. ಈವರೆಗೂ ಸ್ಟಾರ್ ನಟರನೇಕರ ಸೂಪರ್ ಹಿಟ್ ಸಿನಿಮಾಗಳು ಪನೋರಮಾ ಕಡೆಯಿಂದಲೇ ತೆರೆಕಂಡಿವೆ. ಇಂಥಾ ಸಂಸ್ಥೆ ಬನಾರಸ್ ವಿತರಣೆಯ ಜವಾಬ್ದಾರಿ ಹೊತ್ತುಕೊಂಡಿರೋದರಿಂದ ಈ ಸಿನಿಮಾದ ಕಿಮ್ಮತ್ತು ಮತ್ತಷ್ಟು ಹೆಚ್ಚಿಕೊಂಡಂತಾಗಿದೆ.
ವಿಶೇಷವೆಂದರೆ, ಖ್ಯಾತ ಬಾಲಿವುಡ್ ನಟ ಅಜಯ್ ದೇವಗನ್ ಕೂಡಾ ಈ ಸಂಸ್ಥೆಯ ಪಾಲುದಾರರಾಗಿದ್ದಾರೆ. ಒಂದಷ್ಟು ಸಿನಿಮಾಗಳೊಂದಿಗೆ ವ್ಯವಹಾರ ನಡೆಯುವಾಗ ಖುದ್ದು ಅಜಯ್ ದೇವಗನ್ ಅದರ ದೇಖಾರೇಖಿ ನೋಡಿಕೊಳ್ಳುತ್ತಾರೆ. ಈ ಸಂಸ್ಥೆಯ ಕಡೆಯಿಂದ ಸಿನಿಮಾವೊಂದು ಬಿಡುಗಡೆಗೊಳ್ಳೋದು ಸಲೀಸಿನ ಸಂಗತಿಯಲ್ಲ. ಅದು ನಿಜಕ್ಕೂ ಪ್ರತಿಷ್ಠೆಯ ಸಂಗತಿ. ಯಾಕೆಂದರೆ, ಎಲ್ಲ ಬಗೆಯಲ್ಲಿಯೂ ಪರಿಪೂರ್ಣವಾಗಿರುವ, ಗೆಲುವಿನ ಲಕ್ಷಣಗಳನ್ನು ಹೊಂದಿರುವ ಚಿತ್ರಗಳನ್ನು ಮಾತ್ರವೇ ಈ ಸಂಸ್ಥೆ ತನ್ನದಾಗಿಸಿಕೊಳ್ಳುತ್ತೆ. ಇದೀಗ ಬನಾರಸ್ ವಿತರಣಾ ಹಕ್ಕೂ ಪನೋರಮಾ ಪಾಲಾಗಿರೋದೇ, ಈ ಚಿತ್ರದೆಡೆಗಿನ ನಿರೀಕ್ಷೆ ಉತ್ತರದಾದ್ಯಂತ ಹಬ್ಬಿಕೊಳ್ಳುವಂತೆ ಮಾಡಿದೆ.
ಇದು ಬನಾರಸ್ ಪಾಲಿಗೆ ನಿಜಕ್ಕೂ ಆರಂಭಿಕ ಗೆಲುವೆಂಬುದರಲ್ಲಿ ಎರಡು ಮಾತಿಲ್ಲ. ಕನ್ನಡದತ್ತ ಪ್ರಧಾನವಾಗಿ ಗಮನ ಹರಿಸಿದ್ದ ಬನಾರಸ್ ಚಿತ್ರತಂಡದ ಪಾಲಿಗೆ, ಉತ್ತರದಲ್ಲಿ ಪಾದವೂರೋದೂ ಕೂಡಾ ಮುಖ್ಯವಾಗಿತ್ತು. ಈ ಸಂಬಂಧವಾಗಿ ಹಲವಾರು ದಿನಗಳಿಂದಲೂ ಮಾತುಕತೆಗಳು ನಡೆಯುತ್ತಿದ್ದವು. ಇದೀಗ ಎಲ್ಲವೂ ಸ್ಪಷ್ಟವಾಗಿದೆ. ಈ ವಿದ್ಯಮಾನದಿಂದ ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್, ನಾಯಕ ನಟ ಝೈದ್ ಖಾನ್, ನಿರ್ದೇಶಕ ಜಯತೀರ್ಥ ಸೇರಿದಂತೆ ಒಂದಿಡೀ ಚಿತ್ರತಂಡವೇ ಖುಷಿಗೊಂಡಿದೆ. ಅಂದಹಾಗೆ, ಈ ಚಿತ್ರ ನವೆಂಬರ್ ನಾಲಕ್ಕನೇ ತಾರೀಕಿನಂದು ದೇಶಾದ್ಯಂತ ಅದ್ದೂರಿಯಾಗಿ ತೆರೆಗಾಣಲಿದೆ. ಕರ್ನಾಟಕದಲ್ಲಿಯೂ ಅತೀ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬನಾರಸ್ ಅನ್ನು ಬತೆರೆಗಾಣಿಸಲು ಡಿ ಬೀಟ್ಸ್ಯೋಜನೆ ಹಾಕಿಕೊಂಡಿದೆ.