ರಿಷಬ್ ಶೆಟ್ಟಿ ಇದೀಗ ಕಾಂತಾರ2 ಕಥೆ ಸೃಷ್ಟಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆಂಬ ಸುದ್ದಿಗಳು ಹರಿದಾಡುತ್ತಿವೆ. ಕಾಂತಾರದ ಭರ್ಜರಿ ಯಶಸ್ಸಿನ ನಂತರ ಭಾರೀ ಪ್ರಚಾರ ಪಡೆದುಕೊಂಡಿರುವ ರಿಷಭ್, ಕಥೆ ಸಿದ್ಧಗೊಳಿಸುವ ಕಾರ್ಯದ ನಡುವೆಯೂ ಆಗಾಗ, ಬೇರೆ ಬೇರೆ ರೀತಿಯಲ್ಲಿ ಸುದ್ದಿ ಕೇಂದ್ರದಲ್ಲಿರುತ್ತಾರೆ. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿ, ಮನವಿ ಪತ್ರವೊಂದನ್ನು ಸಲ್ಲಿಸುವ ಮೂಲಕ ಮತ್ತೆ ಚರ್ಚೆ ಹುಟ್ಟು ಹಾಕಿದ್ದಾರೆ. ಅದರಲ್ಲಿಯೂ, ಸಿನಿಮಾದಾಚೆಗೆ ದೃಷ್ಟಿ ಹೊರಳಿಸಿ ಸಾಮಾಜಿಕ ಕಳಕಳಿಯ ಮೂಲಕ ರಿಷಭ್ ಮೆಚ್ಚುಗೆಯನ್ನೂ ಪಡೆದುಕೊಂಡಿದ್ದಾರೆ.
ಕಾಂತಾರ ಚಿತ್ರೀಕರಣ ಮತ್ತು ಕಥೆಯ ಭಾಗವಾಗಿ ರಿಷಭ್ ಕಾಡಂಚಿನ ಪ್ರದೇಶಗಳಲ್ಲಿ ತಿಂಗಳುಗಟ್ಟಲೆ ಸುತ್ತಾಡಿದ್ದರು. ಅಲ್ಲಿನ ಜನರ ಬದುಕು, ಬವಣೆಗಳನ್ನು ಕಣ್ಣಾರೆ ಕಂಡಿದ್ದರು. ಅದರ ಜೊತೆಯಲ್ಲಿಯೇ, ವನ ರಕ್ಷಕರ ತೊಂದರೆ, ತಾಪತ್ರಯಗಳನ್ನೆಲ್ಲ ಅರಿತುಕೊಂಡಿದ್ದರು. ಸಾಮಾನ್ಯವಾಗಿ ಚಿತ್ರತಂಡಗಳು ಹೀಗೆ ಜನರ ನಡುವೆ ಬೆರೆತರೂ ಕೂಡಾ ಸಿನಿಮಾದಾಚೆಗೆ ಅವರ ಬದುಕಿನ ಬಗ್ಗೆ ಆಲೋಚಿಸೋದು ವಿರಳ. ಆದರೆ, ರಿಷಬ್ ಕಾಡಂಚಿನ ಜನರ ಬವಣೆ ನೀಗಿಸಿ, ವನಪಾಲಕರತ್ತಲೂ ಗಮನ ಹರಿಸುವಂತೆ ಕೋರಿ ಸಿಎಂಗೆ ಮನವಿ ಸಲ್ಲಿಸಿದ್ದಾರೆ. ಈ ನಿಟ್ಟಿನಲ್ಲಿ ಅವರ ನಡೆಯನ್ನು ಮೆಚ್ಚಿಕೊಳ್ಳಲೇ ಬೇಕು.
ಆದರೆ… ಇದು ಹೇಳಿಕೇಳಿ ಚುನಾವಣೆ ಹತ್ತಿರಾಗುತ್ತಿರುವ ಸಮಯ. ಇಂಥಾ ಹೊತ್ತಿನಲ್ಲಿ ಸಿಎಂ ಚಿತ್ತವೇನಿದ್ದರೂ ಚುನಾವಣೆಯತ್ತಲೇ ಕೀಲಿಸಿಕೊಂಡಿದೆ. ಚುನಾವಣೆ ಇಲ್ಲದ ಸಮಯದಲ್ಲಿಯೂ ಕೂಡಾ ಸಿಎಂ ಸಾಹೇಬರ ಕಾರ್ಯವೈಖರಿ ಅಷ್ಟಕ್ಕಷ್ಟೇ ಎಂಬಂತಿತ್ತು. ಸಿನಿಮಾ, ಕಾರ್ಯಕ್ರಮ, ಟೀವಿ ಇಂಟರ್ವ್ಯೂ ಅಂತೆಲ್ಲ ಬೊಮ್ಮಾಯಿ ಬ್ಯುಸಿಯಾಗಿದ್ದರು. ಈ ನಡುವೆ ಫಾರ್ಟಿ ಪರ್ಸೆಂಟೇಜ್ ಕಳಂಕವೂ ಅವರನ್ನು ಸುತ್ತಿಕೊಂಡಿತ್ತು. ಏನೇ ಸಮಸ್ಯೆ ಬಂದರೂ ಕಠಿಣ ಕ್ರಮ ಕೈಗೊಳ್ಳೋದಾಗಿ ಬಡಬಡಿಸುವ ಮೂಲಕ ಬೊಮ್ಮಾಯಿ ಅಸಮರ್ಥ ಮುಖ್ಯಮಂತ್ರಿ ಎಂಬಂತೆಯೇ ಬಿಂಬಿತರಾಗಿದ್ದರು. ಹೇಳಿಕೊಳ್ಳುವಂಥಾ ಯಾವ ಕೆಲಸ ಕಾರ್ಯಗಳನ್ನೂ ಮಾಡದ ಸಿಎಂಗೆ ರಿಷಭ್ ಮನವಿ ತಾಕೀತೆಂಬುದಕ್ಕೆ ಯಾವ ಖಾತರಿಯೂ ಇಲ್ಲ. ರಿಷಭ್ರ ಸಾಮಾಜಿಕ ಕಳಕಳಿಯ ನಡೆ ಬೊಮ್ಮಣ್ಣನ ಮುಂದೆ ಕಿನ್ನರಿ ಬಾರಿಸಿದಂತಾಗದಿರಲೆಂಬುದು ಹಾರೈಕೆ!